Tuesday 18 January 2011

ಈ ಕ್ಷಣ...

ಯಾರಯಾರನ್ನೋ ಕಾಡಿ ಬೇಡಿ ತಂದ ಕನಸುಗಳು
ಬಹುಕಾಲ ಉಳಿಯುವುದಿಲ್ಲವೆಂಬ ಸತ್ಯ
ನನಗಾಗ ಗೊತ್ತಿರಲಿಲ್ಲ
ಈಗ ಜಗವೇ ಕತ್ತಲಾಗಿದೆ
ತಡಕಾಡಿದರೆ ಪಕ್ಕದಲ್ಯಾರೂ ಇಲ್ಲ.

ಪ್ರೀತಿಗೆ ದೇಹದ ಹಂಗಿಲ್ಲ
ಎಂದವನ ಕೇಳಬೇಕಿದೆ
ನಿನ್ನ ಇಡೀ ಅಸ್ತಿತ್ವವನ್ನೇ ಆರಾಧಿಸುವಾಗ
ದೇಹವೊಂದನ್ನು ದೂರ ಇಡಲೇ ಎಂದು.
ನನ್ನ ಇಬ್ಬಗೆ ನೋಡಿ ದೂರದ ಕೃಷ್ಣ ಓಡಿಬರುವನೇ?

ಆ ಶಿಖರದಲ್ಲಿ ಸಂಧಿಸೋಣ ಎಂದವನ ಪತ್ತೆಯಿಲ್ಲ
ಬಹಳ ಕಾಲವಾಯಿತು
ತುದಿ ಏರಬಲ್ಲೆ..ಗುರಿ ತಲುಪಬಲ್ಲೆ
ಅವನಿಗಾಗಿ ಏನೂ ಮಾಡಬಲ್ಲೆ
ಎಂದವನಿಗೆ ಗೊತ್ತಿತ್ತಾ?

ಆಸೆಯೂ ಇರಲಿ, ದುಃಖವೂ ಬರಲಿ
ಈ ಹಾದಿಯಲ್ಲಿ ಬೇರೆ ಯಾರೂ ಬರದಿರಲಿ
ಹತ್ತಾರು ಜನ್ಮ ಬೇಗೆಯಲ್ಲೇ ಇರಬಲ್ಲೆ
ಕ್ಷಣ ಕಾಲದ ಸುಖವೇ ಸಾಕು ಬದುಕಿಗೆ
ಸುಖ ಕ್ಷಣಿಕ ಎಂದವರು ಯಾರು ?








1 comment: